ಸುಮಾರು ವರ್ಷಗಳ ಹಿಂದೆ ನಡೆದಿದ್ದು. ಒಂದು ಭಾನುವಾರ ನಾನು, ನನ್ನ ಪತ್ನಿ ಹಾಗು ನಮ್ಮ ಆರು ವರ್ಷದ ಮಗ ಬೆಳಗ್ಗೆನೇ ಎದ್ದು, ಹೊಸದಾಗಿ ಕೊಂಡಿದ್ದ ಆಲ್ಟೊ ಕಾರಿನಲ್ಲಿ ಒಂದು ದಿನದ ಪಯಣಕ್ಕೆ ಹೊರಟೆವು. ದಾರಿಯಲ್ಲಿ ಹೋಗುತ್ತಾ, ಎಲ್ಲಿ ಹೋಗೋಣ ಎಂದು ಯೋಚಿಸಿ, ಭೀಮೇಶ್ವರಿ ಜಂಗಲ್ ಲಾಡ್ಜಿಗೆ ಹೋಗೋಣ ಅಂತ ತೀರ್ಮಾನಿಸಿದೆವು. ಮುಂಚಿತವಾಗಿ ಅಲ್ಲಿ ಬುಕ್ ಮಾಡಬೇಕೆಂಬುದು ಅರಿವಿರಲಿಲ್ಲ. ಈ ತೀರ್ಮಾನ ಕೈಗೊಳ್ಳುವಷ್ಟರಲ್ಲಿ ನಾವಾಗಲೇ ಕನಕಪುರದ ಹತ್ತಿರ ಬಂದಿದ್ದೆವು. ಅಲ್ಲಿ ಒಂದು ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿ, ಅಲ್ಲಿಯೇ ಇದ್ದ ಒಂದು ಹೋಟೆಲಿನಲ್ಲಿ ಇಡ್ಲಿ, ವಡೆ ಮತ್ತು ಉಪ್ಪಿಟ್ಟು ತಿಂದೆವು. ಪುನಃ ರಸ್ತೆಗಿಳಿದ ಕಾರು ಭೀಮೇಶ್ವರಿ ಕಡೆ ಹೊರಟಿತು. ಒಂದು ಗ್ರಾಮದ ಹೆಬ್ಬಾಗಿಲಲ್ಲಿ ಒಂದಷ್ಟು ಹುಡುಗರು ನಿಂತು, ಬರುತಿದ್ದ ಎಲ್ಲ ಕಾರುಗಳನ್ನು ನಿಲ್ಲಿಸಿ, ಚಂದ ವಸೂಲಿ ಮಾಡುತ ಇದ್ದರು. ನಮ್ಮನ್ನು ನಿಲ್ಲಿಸಿ, ಇಪ್ಪತ್ತು ರೂಪಾಯಿಗಳ ವಂತಿಕೆ ಪಡೆದು, ಒಂದು ರಸೀತಿ ಕೊಟ್ಟು ಕಳುಹಿಸಿದರು. ಸ್ವಲ್ಪ ಮುಂದೆ ಹೋಗುತ್ತಿದಂಗೆ, ಒಬ್ಬ ತೀರಾ ಮುದುಕನೂ ಅಲ್ಲ, ತೀರಾ ಮಧ್ಯವಯಸ್ಕನೂ ಅಲ್ಲದ ವ್ಯಕ್ತಿ ಕೈ ತೋರಿಸಿ ನಮ್ಮನ್ನು ತಡೆ ಹಿಡಿದನು. ನಾನು ನಿಲ್ಲಿಸಿ, ಕಿಟಕಿಯ ಗಾಜನ್ನು ಕೆಳಗಿಳಿಸಿದೆ. ಆತ "ನಾನು ಜೊತೆಯಲಿ ಬರುವೆ, ಸ್ವಲ್ಪ ಮುಂದೆ ನನ್ನನ್ನು ಇಳಿಸಿ" ಎಂದು ಕೋರಿದಾಗ, ನಾನು ಮತ್ತು ಪತ್ನಿ, ಇಬ್ಬರೂ ಮುಖ ಮುಖ ನೋಡಿಕೊಂಡು, ಕಣ್ಣಲ್ಲ...